ಲಂಡನ್ನೆಡೆಗೆ ಯಕ್ಷ ನಡಿಗೆ
ಲೇಖಕರು : ವರ್ಕಾಡಿ ರವಿ ಅಲೆವೂರಾಯ
ಸೋಮವಾರ, ಆಗಸ್ಟ್ 11 , 2014
|
ಯಕ್ಷಗಾನಕ್ಕೆ ಒಂದು ಹೊಸ ದಿಶೆಯನ್ನು ತೋರಿಸಲು ಯಕ್ಷಗಾನ ಲಂಡನ್ ಯಕ್ಷಗಾನ ಸ್ಪರ್ಧೆ ಸಿದ್ಧ ವಾಗಿದೆ. ಸಾವಿರಕ್ಕಿಂತಲೂ ಮಿಕ್ಕಿದ ಯಕ್ಷ ಕಲಾವಿದರು ಈ ಲಂಡನ್ ಯಕ್ಷಗಾನ ಸ್ಪರ್ಧೆ (ಎಲ್ವೈಸಿ)ಯ ಭಾಗ ವಾಗಿದ್ದಾರೆ. ಚಂದ್ರಗಿರಿಯ ಮಡಿಲಿಂದ ಉದ್ಭವಿಸಿದ ಈ ಯಕ್ಷಗಾನ ನೇತ್ರಾವತಿಯನ್ನು ಹಾದು, ಕಾರವಾರದ ವರೆಗೂ ತೆಂಕುತಿಟ್ಟು -ಬಡಗುತಿಟ್ಟುಗಳೆಂಬ ಎರಡು ಪ್ರಭೇದಗಳಲ್ಲಿ ಮೆರೆಯುತ್ತಿದೆ. ಅವಕ್ಕೆ ಇನ್ನಷ್ಟು ಮೆರುಗನ್ನು ನೀಡುವುದಕ್ಕಾಗಿ ಈ ಸ್ಪರ್ಧೆ ಆಯೋಜಿಸಲ್ಪಟ್ಟಿದೆ. ಸಣ್ಣ ಯಕ್ಷಕಲಾವಿದರಿಂದ ಹಿಡಿದು ಶ್ರೇಷ್ಠ ಕಲಾವಿದರವರೆಗೂ, ಹವ್ಯಾಸಿಗಳಿಂದ ಹಿಡಿದು ವೃತ್ತಿಪರರವರೆಗೂ ಇಂದು ಎಲ್ವೈಸಿ ಮನೆ ಮಾತಾಗಿದೆ.
|
ಕುಮಾರ, ಕುಂಟಿಕಾನ ಮಠ
|
ವೆಬ್ಸೈಟ್ಗಳಲ್ಲಿ, ಫೇಸ್ಬುಕ್ನಲ್ಲಿ ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ದೇಶ - ವಿದೇಶಗಳ ಮಂದಿಯಿಂದ ಬರುತ್ತಿರುವುದು ಸ್ವಾಗತಾರ್ಹ. ಇದನ್ನು ವರುಷಾನುಗಟ್ಟಲೆಯಿಂದ ಯೋಜಿಸಿ, ಯೋಚಿಸಿ ಕಾರ್ಯರೂಪಕ್ಕೆ ತಂದ ಇದರ ನಿರ್ದೇಶಕರಾದ ಕುಮಾರ, ಕುಂಟಿಕಾನ ಮಠ ಅಭಿನಂದನಾರ್ಹರು. ಅತ್ಯಂತ ವಿಶಾಲ ದೃಷ್ಟಿ ಯಿಂದ ಯಕ್ಷಗಾನವನ್ನು ವಿಶಾಲ ಪ್ರದೇಶಕ್ಕೆ ಒಯ್ಯುವ ಪ್ರಯತ್ನಕ್ಕೆ, ದೊಡ್ಡ ಸಾಹಸಕ್ಕೆ ಅವರು ಕೈಹಾಕಿದ್ದಾರೆ. ಇವರಿಗೆ ಹೆಗಲು ನೀಡುತ್ತಿರುವವರು ಎಲ್ವೈಸಿಯ ಕಾರ್ಯಕಾರಿ ನಿರ್ದೇಶಕ ಗಣೇಶ್ ಭಟ್, ಬಾಯಾರು ಮತ್ತು ಕುಂಟಿಕಾನ ಎಂಟರ್ಪ್ರೈಸಸ್ ನ ಮಾಲಕ ಗೋವಿಂದರಾಜ. ಇವರ ಪ್ರಯತ್ನದ ಫಲವಾಗಿ ಇತ್ತೀಚೆಗೆ ಹವ್ಯಾಸಿಗಳಿಗಾಗಿ ಮಂಗಳೂರು ಮತ್ತು ಉಡುಪಿಗಳಲ್ಲಿ ನಡೆದ "ಆಡಿಷನ್' ಸ್ಪರ್ಧೆಗೆ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿತ್ತು. ಆಗಸ್ಟ್ ಒಂದರಿಂದ ಆರಂಭವಾಗುವ ಮೇಳ/ ಹವ್ಯಾಸಿ/ ಮಹಿಳಾ ತಂಡಗಳ ಸ್ಪರ್ಧೆಗೂ ಇದೇ ರೀತಿಯ ಪ್ರತಿಕ್ರಿಯೆ ಲಭಿಸುವ ಮುನ್ಸೂಚನೆ ಇದೆ.
ಪ್ರೇಕ್ಷಕರ ಬೆಂಬಲ
ಪ್ರೇಕ್ಷಕರನ್ನು ಕುಮಾರಣ್ಣ ಹೇಗೆ ಬರಿಸಿದರು? ಕೆಲವರು ಯಕ್ಷಗಾನದ ಮೇಲಿನ ಪ್ರೀತಿಯಿಂದ ಬಂದರು. ಕುಮಾರಣ್ಣನ ಸಹಜ ಸಂಪರ್ಕ, ಜನರನ್ನು ತಲುಪುವ ಗುಣದಿಂದಾಗಿ ಬಂದರು. ಇನ್ನು ಕೆಲವರು ಅರೆ - ಮನಸ್ಸಿನಲ್ಲಿದ್ದರು. ಏನಾಗುತ್ತದೋ - ನೋಡಿಯೇ ಬಿಡೋಣ ಎಂಬಂತೆ ಬಂದರು. ಕೆಲವರ ಮನಸ್ಸು ಹುಳ್ಳಹುಳ್ಳಗೆ ಇತ್ತು. ಅವರೂ ಬಂದರು. ಇನ್ನು ಕಂಸನಂತೆ "ವಿರೋಧ ಭಕ್ತಿಯಿಂದ' ಬಂದವರು ಕೆಲವರು. "ಪರ - ಮಧ್ಯಮ - ವಿರೋಧ' ಹೀಗೆ ಎಲ್ಲಾ ವರ್ಗದ ಜನರ ಸಂಪ್ರೀತಿಯನ್ನು ಗಳಿಸಲು ಕುಮಾರಣ್ಣ ಶಕ್ತರಾದರು.
2011ರ ವಿಶ್ವಕನ್ನಡ ಸಮ್ಮೇಳನವನ್ನು ಅದ್ದೂರಿಯಾಗಿ ಸಂಘಟಿಸಿದ ಅನುಭವ ಇದರ ನಿರ್ದೇಶಕರಿಗೆ ಈ ಸ್ಪರ್ಧೆ ಆಯೋಜಿಸಲು ಸ್ಫೂರ್ತಿಯಾಯಿತಂತೆ. ಹಾಗೆ ಅಲ್ಲಿಂದ ಮೊಳಕೆಗೊಂಡ ಸಸಿ ಇಂದು ಎಲ್ವೈಸಿ ಹೆಸರಿನಲ್ಲಿ ಮರವಾಗಿದೆ. ಈ ಸ್ಪರ್ಧೆಗಳು ಮುಗಿದಾಗ ಹೆಮ್ಮರವಾಗುತ್ತದೆ. ಈಗಾಗಲೇ ಕುತೂಹಲಕಾರಿಯಾಗಿ ಸಾಗುತ್ತಿರುವ ಈ ಕಾರ್ಯಕ್ರಮ ಪ್ರತಿಯೊಬ್ಬನ ನಾಲಗೆಯ ತುದಿಯಲ್ಲಿ ಕುಣಿಯುತ್ತಿದೆ. ಅಂತರ್ಜಾಲ, ಫೇಸ್ಬುಕ್ಗಳಲ್ಲಿ ಕೂಡ ಇದರ ಬಗ್ಗೆ ಮಾತು ಹರಿದಾಡುತ್ತಿದೆ.
ಆಡಿಷನ್ ಸುತ್ತಿನಲ್ಲೇ ಮೆರೆದ ಎಲ್ವೈಸಿ
26 ತಂಡಗಳು, ಸರಾಸರಿ 20 ಮಂದಿಯಂತೆ (ಹಿಮ್ಮೇಳ + ಮುಮ್ಮೇಳ) ಈ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದುವು. ತಯಾರಿ ಎಲ್ಲಾ ತಂಡಗಳ ಪ್ರದರ್ಶನಗಳಲ್ಲೂ ಎದ್ದು ಕಾಣುತ್ತಿತ್ತು. ದೀರ್ಘ ಕಥೆಯನ್ನು ಒಂದು ಗಂಟೆಗೆ ಭಟ್ಟಿ ಇಳಿಸುವಾಗ ಅನೇಕ ಎಡವಟ್ಟುಗಳು ಆಗುವುದು ಸಹಜ. ಆದರೆ, ಮಂಗಳೂರು ಪುರಭವನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸ್ಪರ್ಧೆಯ ಯಾವ ತಂಡಗಳೂ ಇಂತಹ ತಪ್ಪುಗಳನ್ನು ಮಾಡಿಲ್ಲ. ಅಚ್ಚುಕಟ್ಟಾಗಿ ಒಂದು ಗಂಟೆಯ ಕಾಲ ಯಕ್ಷಗಾನ ನಡೆಸಿ ಎಲ್ಲರೂ ತಮ್ಮ ಪ್ರೌಢಿಮೆ ಮೆರೆದರು. ಈ ಸುತ್ತಿನಲ್ಲೇ ಯಕ್ಷರಂಗದ ಅನೇಕ ಖ್ಯಾತ ಹಿಮ್ಮೇಳ - ಮುಮ್ಮೇಳ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದರು. 26 ತಂಡಗಳ ನಡುವಿನ ಸ್ಪರ್ಧೆಯ ಫಲಿತಾಂಶಗಳು ಬಂದಿದ್ದು, 9 ಹವ್ಯಾಸಿ ಮತ್ತು 5 ಮಹಿಳಾ ತಂಡಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿವೆ.
|
ಯಕ್ಷಗಾನಕ್ಕೆ ಒಂದು ಹೊಸ ದಿಶೆಯನ್ನು ತೋರಿಸಲು ಯಕ್ಷಗಾನ ಲಂಡನ್ ಯಕ್ಷಗಾನ ಸ್ಪರ್ಧೆ ಸಿದ್ಧ ವಾಗಿದೆ.
|
ಈ ಎಲ್ಲಾ 14 ತಂಡಗಳೂ ಆಗಸ್ಟ್ 1ರಿಂದ 7ರವರೆಗೆ ನೆಹರೂ ಮೈದಾನದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗ ವಹಿಸಲಿವೆ. ಆಡಿಷನ್ ಸುತ್ತಿನಲ್ಲಿ ಊಟೋಪಚಾರ, ಧ್ವನಿ - ಬೆಳಕು, ವೇಷಭೂಷಣ, ಹಿಮ್ಮೇಳ - ಸಾಹಿತ್ಯವನ್ನು ಒದಗಿಸಿ ದೊಡ್ಡ ಉಪಕಾರ ಮಾಡಿದ್ದಾರೆ ಇದರ ವ್ಯವಸ್ಥಾಪಕರು. ಜೊತೆ ಜೊತೆ ಆಕರ್ಷಕ ಪ್ರಮಾಣಪತ್ರ ಮತ್ತು ರೂ. 15,000ದ ಮೊತ್ತವನ್ನು ನೀಡಿ ಗೆದ್ದ ಹವ್ಯಾಸಿ ತಂಡಗಳನ್ನು ಆಧರಿಸಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಹಾಲ್ನಲ್ಲಿ ಬಡಗುತಿಟ್ಟಿನ ಹವ್ಯಾಸಿ ತಂಡಗಳಿಗೆ ಆಡಿಷನ್ ನಡೆದಿದೆ. ಅಲ್ಲಿಯೂ ಅನೇಕ ತಂಡಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿ ಮುಂದಿನ ಸುತ್ತಿನಲ್ಲಿ ವೃತ್ತಿಪರ / ಮಹಿಳಾ ತಂಡಗಳ ಜೊತೆ ಸ್ಪರ್ಧಿಸಲಿವೆ. ಅನಂತರ ಅಲ್ಲೂ ಸೆಮಿಫೈನಲ್ಗೆ ಆಯ್ಕೆ ನಡೆಯುತ್ತದೆ.
ಆಗಸ್ಟ್ 1ರಿಂದ 7ರವರೆಗೆ ತೆಂಕುತಿಟ್ಟು ಕ್ವಾರ್ಟರ್ ಫೈನಲ್ ಸ್ಪರ್ಧೆ ನೆಹರೂ ಮೈದಾನದಲ್ಲಿ ನಡೆದರೆ, ಕುಂದಾಪುರದಲ್ಲಿ ಬಡಗುತಿಟ್ಟಿನ ಸ್ಪರ್ಧೆ ಆಗಸ್ಟ್ 9ರಿಂದ 15ರವರೆಗೆ ನಡೆಯುತ್ತದೆ. ಇಲ್ಲಿ ಉಭಯ ತಿಟ್ಟುಗಳಿಂದ ಆಯ್ಕೆಯಾದ ತಂಡಗಳಿಗೆ ಮತ್ತೂಂದು ಸುತ್ತಿನ ಸ್ಪರ್ಧೆ ಇದೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಅಪಾಯದ ಹಂತ ದಲ್ಲಿರುವ ತಂಡಗಳಿಗೆ ಸ್ಪರ್ಧೆ ನಡೆಯುತ್ತದೆ. ಇದು ಆಗಸ್ಟ್ 20-21ರಂದು ನಡೆಯುವುದು ಮೈಸೂರಿನ ಜಗನ್ಮೋಹನ ಅರಮನೆ ರಂಗಮಂದಿರದಲ್ಲಿ. ಅಲ್ಲಿಂದ ಎರಡೆರಡು ವೃತ್ತಿ ಪರ, ಮಹಿಳಾ, ಹವ್ಯಾಸಿ ತಂಡಗಳು ಆಯ್ಕೆಯಾಗಿ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸ್ಪರ್ಧೆಗಾಗಿ ಸೇರುತ್ತವೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ನಡೆಯುವ ಕೊನೆಯ ಸುತ್ತಿನಲ್ಲಿ ಅಂತಿಮ ಹಣಾಹಣಿ ಯೊಂದಿಗೆ ಗೆಲ್ಲುವ ""ಲಂಡನ್ ವೀರರು' ಯಾರೆಂಬುದು ನಿರ್ಧರಿಸಲ್ಪಡುತ್ತದೆ.
ಹೊಸ ರೀತಿಯ ಸ್ಪರ್ಧೆ
ಕ್ವಾರ್ಟರ್, ಸೆಮಿಫೈನಲ್ ಮತ್ತು ಫೈನಲ್ ಎಂಬ ಈ ವಿಶಿಷ್ಟ ರೀತಿಯ ಸ್ಪರ್ಧೆ ಯಕ್ಷರಂಗದಲ್ಲೇ ಹೊಸತು. ಈ ಮಧ್ಯೆ ಪ್ರೇಕ್ಷಕರ ಅಭಿಪ್ರಾಯಕ್ಕೂ ಮನ್ನಣೆ ನೀಡುವ ಆಲೋಚನೆಯಿದೆ. ಹೀಗೆ ಪ್ರೇಕ್ಷಕನಿಗೂ ಕಲಾವಿದನಿಗೂ ಒಂದು ರೀತಿಯ ಸಂವಾದ ಉಂಟು ಮಾಡುವ ಹೊಸ ಚಿಂತನೆ ಅಪೂರ್ವವಾದುದು.
ಅಂತಿಮವಾಗಿ ಗೆದ್ದ ಬಡಗಿನ ಒಂದು, ತೆಂಕಿನ ಒಂದು ತಂಡ ಲಂಡನ್ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿವೆ. ತಂಡ ಬಹುಮಾನ, ವೈಯಕ್ತಿಕ ಬಹುಮಾನ ಎಲ್ಲವೂ ದೊಡ್ಡ ಮೊತ್ತದಲ್ಲೇ ಇರುವುದರಿಂದ ಇದು ನಭೂತೋ... ಕಾರ್ಯಕ್ರಮ. ಹಾಗಾಗಿ ಕಲಾವಿದ ತನ್ನ ಶಕ್ತಿಮೀರಿ ಪ್ರಯತ್ನಿಸಿ ಇದನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಿದರೆ ಲಂಡನ್ನ ದಾರಿ ದೂರವಿಲ್ಲ.
ದೂರಗಾಮಿ ಯೋಚನೆ, ದೃಷ್ಟಿ, ಪ್ರಯತ್ನ -ಹೀಗೆ ಒಂದೊಂದೇ ಭೀಮ ಹೆಜ್ಜೆಗಳನ್ನಿರಿಸುತ್ತ ಎಲ್ವೈಸಿ ಮುಂದೆ ಸಾಗುತ್ತಿದೆ. ಅದರ ಜತೆಗೆ ಹೆಜ್ಜೆ ಹಾಕಲು ನಮಗೂ ನಮ್ಮಂತಹ ಇತರ ಹವ್ಯಾಸಿ ತಂಡಗಳಿಗೂ ಸಾಧ್ಯವಾದುದಕ್ಕೆ ನಾವು ಎಲ್ವೈಸಿಗೆ ಅಭಿನಂದನೆ ಹೇಳಲೇಬೇಕು.
ಕೃಪೆ :
http://www.udayavani.com
|
|
|